ಬುಧವಾರ, ನವೆಂಬರ್ 11, 2009

ಸುಮ್ಮನೆ ಹೊರಟು ಬಿಡಿ, ಹೇಳ ಬೇಡಿ ಕಾರಣ

ಬ್ಲಾಗ್ ಆರಂಭಿಸಿದ ಕೆಲವೇ ದಿನಗಳಲ್ಲಿ ರಾಜಕಾರಣ ಕುರಿತು ಬರೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ನನಗನಿಸಿರಲಿಲ್ಲ. ಎರಡು ದಿನಗಳಿಂದ ನನಗೆ (ಬಹುಶಃ ಈ ರಾಜ್ಯದ ಅನೇಕರಿಗೂ) ಕಾಡುತ್ತಿರುವ ಆತಂಕ 'ನಾವು ಒಬ್ಬ ದುರ್ಬಲ ಮುಖ್ಯಮಂತ್ರಿ' ಯಿಂದ ಆಳಲ್ಪಿಟ್ಟಿದ್ದೇವೆ.
"ನಾಡಿನ ಅರಣ್ಯ ಸಂಪತ್ತು ಹಿಡಿಯಷ್ಟು ಜನರ ಲಾಭಕ್ಕಾಗಿ ದುರುಪಯೋಗವಾಗುತ್ತಿದೆ, ಆದರೂ ನಾವು ಏನೂ ಮಾಡಲಾರದ ಸ್ಥಿತಿಯಲ್ಲಿದ್ದೇವೆ..." - ಹತ್ತಿರಹತ್ತಿರ ಆರು ಕೋಟಿ ಜನರನ್ನು ಪ್ರತಿನಿಧಿಸುವ, ಈ ರಾಜ್ಯದ ಅತ್ಯುನ್ನತ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ಹೀಗೆ ಅಸಹಾಯಕನಾದರೆ, ಈ ನಾಡನ್ನು ಕಳ್ಳರಿಂದ, ದರೋಡೆ ಕೋರರಿಂದ ರಕ್ಷಿಸುವವರಾರು?
ಮುಖ್ಯಮಂತ್ರಿ ನೇತೃತ್ವದಲ್ಲಿ ಈ ರಾಜ್ಯದ ಕಾರ್ಯಾಂಗ ಕೆಲಸ ನಿರ್ವಹಿಸುತ್ತದೆ. ಮುಖ್ಯಮಂತ್ರಿಯೆ ಕೈ ಚೆಲ್ಲಿ ಕೂತರೆ, ಅವರ ಹಿಂದಿರುವ ಅಧಿಕಾರಿಗಳ ಕತೆಯೇನು? ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಯಡಿಯುಊರಪ್ಪ ನಾಡಿಗೆ ನೀಡುತ್ತಿರುವ ಸಂದೇಶ ಏನು? ಹತ್ತು ದಿನಗಳ ಹಿಂದೆ ಮುಖ್ಯಮಂತ್ರಿ ಬಳ್ಳಾರಿಯ ಮುಊರು ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಿದ್ದರು. ಈಗ ಆ ಮುಊರೂ ಅಧಿಕಾರಿಗಳು ಬಳ್ಳಾರಿಗೆ ವಾಪಾಸಾಗಿದ್ದಾರೆ.
ಗಣಿ ಉದ್ಯಮಿಗಳು ಕಡಿಮೆ ಹಣ ಹೂಡಿ ಅತಿ ಹೆಚ್ಚು ಲಾಭ ಮಾಡಿದವರು. ಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಅದಿರು ಲಭ್ಯವಿರುವ ಜಾಗವನ್ನು ಇಂತಿಷ್ಟು ಅವಧಿಗೆ ಲೀಸ್ ಗೆಂದು ಪಡೆದು ಅಲ್ಲಿ ಗಣಿಗಾರಿಕೆ ನಡೆಸುತ್ತಾರೆ.
ಲೀಸ್ ಒಪ್ಪಂದದ ಪ್ರಕಾರ ಸರ್ಕಾರಕ್ಕೆ ಒಂದಿಷ್ಟು ಹಣ ಕಟ್ಟುತ್ತಾರೆ. ಉಳಿದಂತೆ ಒಂದು ಟನ್ ಅದಿರುಗೆ ಇಷ್ಟು ಎಂಬಂತೆ ರಾಯಲ್ಟಿ ಕೊಡುತ್ತಾರೆ. ಹೆಚ್ಚಿನ ಲಾಭಕ್ಕೆ ಬೇರೆ ದೇಶಕ್ಕೆ ಅದಿರನ್ನು ಮಾರುತ್ತಾರೆ. ಒಂದು ಟನ್ ಅದಿರನ ಮೇಲೆ, ಖರ್ಚೆಲ್ಲಾ ಕಳೆದು 3-4 ಸಾವಿರ ರೂಗಳ ಲಾಭ ಇರುವಾಗ, ಹತ್ತಿರ ಹತ್ತಿರ ನೂರು ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವವರು ರಾತ್ರೋರಾತ್ರಿ ಕೋಟ್ಯಾಧೀಶರಾಗುವುದು ಕಷ್ಟದ ಮಾತೇನಲ್ಲ. ಒಂದು ವರದಿಯ ಪ್ರಕಾರ ಬಳ್ಳಾರಿ ರೆಡ್ಡಿಗಳಿಗೆ ಆಪ್ತನಾಗಿದ್ದ ಅರಣ್ಯ ಅಧಿಕಾರಿ ಹಲವು ತಿಂಗಳುಗಳಿಂದ ಅದಿರು ಸಾಗಿಸುವ ಲಾರಿಗಳಿಂದ ಅರಣ್ಯ ಪ್ರದೇಶ ಅಭಿವೃದ್ಧಿ ಸುಂಕವನ್ನು ಸಂಗ್ರಹಿಸುವ ಕೆಲಸವನ್ನೇ ಕೈ ಬಿಟ್ಟುಬಿಟ್ಟಿದ್ದರು. ಈಗ್ಗೆ ಹತ್ತು ದಿನಗಳ ಹಿಂದೆ ಹೊಸದಾಗಿ ನೇಮಕಗೊಂಡ ಅಧಿಕಾರ ಒಂದೇ ವಾರದಲ್ಲಿ (ಅಂದರೆ ಹಳೆಯ ಅಧಿಕಾರಿ ಮರಳಿ ಬರುವವರೆಗೆ) ಏನಿಲ್ಲಾ ಅಂದರೂ 15 ಕೋಟಿ ರೂಗಳಷ್ಟು ಹಣವನ್ನು ಸುಂಕವಾಗಿ ಸಂಗ್ರಹಿಸಿದ್ದರು. ಈ ವರದಿಯು ನಿಜವೇ ಆಗಿದ್ದಲ್ಲಿ, ಸರಕಾರದ ಬೊಕ್ಕಸ ಇದುವರೆಗೂ ಇಂತಹ ಗಣಿ ಕಳ್ಳರಿಂದ ಕಳೆದುಕೊಂಡದ್ದೆಷ್ಟು?
ಪಕ್ಕದ ಆಂಧ್ರ ಪ್ರದೇಶದ ಅಧಿಕಾರಿ ಹೇಳುವಂತೆ ಜನಾರ್ದನ ರೆಡ್ಡಿ ಸಹೋದರರ ಒಡೆತನದಲ್ಲಿರುವ ಗಣಿ ಕಂಪನಿ, ಕರ್ನಾಟಕ ಗಡಿ ಒತ್ತುವರಿ ಮಾಡಿದೆ. ಗಡಿಯನ್ನು ಗುರುತಿಸುವ ಕಲ್ಲುಗಳನ್ನು ನಾಶ ಮಾಡಿ ಹೊಸ ಗಡಿ ಸೃಷ್ಟಿಸಿದೆ. ಅರಣ್ಯ ಇಲಾಖೆ ಅನುಮತಿ ಇಲ್ಲದೆ ಅನಧಿಕೃತವಾಗಿ ಗಣಿಗಾರಿಕೆ ನಡೆಸಿ ಸಾವಿರಾರು ಕೋಟಿ ಲೂಟಿ ಮಾಡಿದೆ. ಆದರೂ ಸರಕಾರ ಏನನ್ನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಸ್ವತಃ ಮುಖ್ಯಮಂತ್ರಿಯೇ ಹಾಗೆ ಒಪ್ಪಿಕೊಂಡಿದ್ದಾರೆ!! ದೇಶದ ಗಡಿ ಕಾಯುವ ಯೋಧ "ಇನ್ನು ನನ್ನ ಕೈಯಲ್ಲಿ ಸಾಧ್ಯವಿಲ್ಲ" ಎಂದು ಕೂತಂತೆ.
ಯಡಿಯುಊರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಹೇಳಿದ ಮಾತುಗಳನ್ನು ಅವರಿಗೆ ಈಗ ನೆನಪಿಸುವ ಅಗತ್ಯವಿದೆ. ರಾಜ್ಯ, ರಾಜ್ಯದ ಗಡಿ, ಸಂಪತ್ತು, ಭಾಷೆ, ಜನ, ಸಂಸ್ಕೃತಿ ಎಲ್ಲವನ್ನೂ ರಕ್ಷಿಸುವ ಹೊಣೆ ನಿಮ್ಮದು. ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿರುವುದು ಆ ಕಾರಣಕ್ಕೆ. ಅದನ್ನೆಲ್ಲಾ ಮರೆತು 'ಏನೂ ಮಾಡಲಾಗದ ಸ್ಥಿತಿ' ಎಂದರೆ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯಲು ನಾಲಾಯಕ್ಕು. ಸುಮ್ಮನೆ ಹೊರಟು ಬಿಡಿ, ಹೇಳ ಬೇಡಿ ಕಾರಣ.

2 ಕಾಮೆಂಟ್‌ಗಳು:

Hulikunte murthy ಹೇಳಿದರು...

ನೀವು ಬರೆಯಲೆಬೇಕಾದುದು ಇದು.. ಚೆನ್ನಾಗಿದೆ..

ಶ್ರೀನಿವಾಸಗೌಡ ಹೇಳಿದರು...

ಮರ್ಯಾದೆಯಿಂದ ಮನೆಗೆ ಹೋಗಿ ಅಂತ ಹೇಳೋರು ಯಾರು ಇಲ್ಲ ಉಂಡೂ ಹೋಗಿ, ಕೊಂಡೂ ಹೋಗಿ ಅನ್ಬೇಕು,
ಅಧಿಕಾರಕ್ಕಾಗಿ ಅಳುವ, ಬೇಡುವ, ಶರಣಾಗುವ ಮಂದಿಯನ್ನ ನೋಡಿದರೆ ಬೇಜಾರಗುತ್ತೆ.