ಭಾನುವಾರ, ಅಕ್ಟೋಬರ್ 18, 2009

ಅರುಣನ ಹೊಸ ಕವಿತೆ..

ಅರುಣ್ ಜೋಳದ ಕೂಡ್ಲಿಗಿ ಹೊಸ ತಲೆಮಾರಿನ ಉತ್ತಮ ಕವಿ. ಸರಳ ಪದ ಪ್ರಯೋಗದಲ್ಲಿ ಗಂಭೀರ ಒಳನೋಟಗಳನ್ನು ಹೊಮ್ಮಿಸುವ ಕಲೆ ಅವನಿಗೆ ಸಿದ್ಧಿಸಿದೆ. ಈ ವಾರದ ಲಂಕೇಶ್ (ಗೌರಿ) ಪತ್ರಿಕೆಯಲ್ಲಿ ಅವನ ಇತ್ತೀಚಿನ ಕವನ ಪ್ರಕಟವಾಗಿದೆ. ನೀವು ಒಮ್ಮೆ ಓದಿ..

ಕೈಗಳೇ ತ್ರಿಶೂಲವಾದ ದೇಶದಲ್ಲಿ
1
ನಾವು ಈ ದೇಶದ ನಿಜ ವಾರಸುದಾರರು
ಅಂದುಕೊಂಡವರಿಂದ ಆಕಾರ ತಿದ್ದಿಸಿಕೊಂಡು
ಚರಿತ್ರೆಯ ನಿಜ ಅಕ್ಷರಗಳ ಮುಊಲೆಗೊತ್ತಿ
ದೇಶಭಕ್ತಿಯ ಬೇರುಬಿಟ್ಟು ಹೆಮ್ಮರವಾಗಿಸಿ
ಓದುವವರ ತಡೆದು ತಾವೇ ಮಾತಾಡಿ ಇದು ಸತ್ಯ ಎಂದು ಕೂಗಿ
ಝಂಡಾ ಹಾರಿಸಿ ಜೈಕಾರ ಹಾಕುವುದ ಕೇಳಿಸಿಕೊಳ್ಳುತ್ತಲೇ
ಬೆಳಗಾಗುವುದರಲ್ಲಿ ಈ ದೇಶದ
ಎಷ್ಟೋ ಜನರ ಕೈಗಳು ತ್ರಿಶೂಲವಾಗುತ್ತವೆ!

2
ರಾತ್ರಿ ಗಂಡ ಮುಟ್ಟಿದಲ್ಲೆಲ್ಲಾ ಕೈ ಚುಚ್ಚಿ ರಕ್ತ ಒಸರಿ
ಆತಂಕದಿ ಇನ್ನೆಂದೂ ನಿನ್ನ ರಾತ್ರಿಗೆ
ಜತೆಯಾಗಲಾರೆ ಎಂದು ಹೆಂಡತಿ ಬಿಕ್ಕಳಿಸುತ್ತಾಳೆ!
ಮುದ್ದಿಸಿ ಕೈ ತುತ್ತನಿಟ್ಟ ಅಪ್ಪನ ಅದೇ ಕೈಗಳು ಇಂದು
ಮುಟ್ಟಲು ಬಂದರೆ
ಕೊಲ್ಲುವ ಭಯವಾಗಿ ಮಗು ಚಿಟಾರನೆ ಚೀರುತ್ತದೆ!

3
ಕೈ ತ್ರಿಶೂಲವಾಗದವರನ್ನೆಲ್ಲಾ ದೇಶದ್ರೋಹಿಗಳೆಂದು
ತೀರ್ಮಾನಿಸಲಾಗುತ್ತದೆ.
ಅಂತಹವರ ಇಲ್ಲವಾಗಿಸಬೇಕೆಂದು ಫರ್ಮಾನು ಹೊರಡುತ್ತದೆ.
ಈಗ ಕಮ್ಮಾರನ ಕುಲುಮೆಯೆದುರು ಅವರು ಸಾಲು ನಿಂತಿದ್ದಾರೆ.
ಕಮ್ಮಾರ ತಿದಿ ಒತ್ತುತ್ತಲೇ ಕೈ ಕೆಂಪತೆ ಕಾಯಿಸಿ
ಸುತ್ತಿಗೆಯಿಂದ ಕೊಡುವ ಒಂದೊಂದು ಏಟಿಗೂ ಅಮ್ಮಾ ಎಂದು
ಅರಚುತ್ತಾರೆ!
ತನ್ನ ಕೈ ತ್ರಿಶೂಲವಾಗದ ಕಮ್ಮಾರನಿಗೂ ಗೊತ್ತು
ತಾನು ಮೊನಚುಗೊಳಿಸಿದ ಕೈಗಳೇ ತನ್ನ ಹಿರಿದು ಕೊಲ್ಲಲಿವೆ
ಎಂದು.

4
ಯುದ್ಧ ಆರಂಭವಾಗುತ್ತದೆ
ಬೆರಳುಳ್ಳ ಕೈನವರ ನಾಶಕ್ಕೆ ಸೈನ್ಯ ಸಜ್ಜಾಗುತ್ತದೆ
ಸಿಕ್ಕವರು ಬಲಿಯಾಗುತ್ತಾರೆ. ಸ್ವತಃ ತಾಯಂದಿರೂ ಕೂಡ.
ಎಷ್ಟೋ ಜನ ಉಸಿರು ಬಿಗಿದು ಬಚ್ಚಿಟ್ಟುಕೊಳ್ಳುತ್ತಾರೆ.
ಹಸುಗೂಸುಗಳನ್ನು ತಾಯಂದಿರು ಮುಚ್ಚಿಟ್ಟುಕೊಳ್ಳುತ್ತಾರೆ.
ಇವರು ಜೈಕಾರ ಹಾಕುತ್ತಾರೆ.
ಗಂಟಲು ಒಣಗಿ ನೀರಿಗಾಗಿ ಹಾಹಾಕಾರ ಏಳುತ್ತದೆ.
ಗುಟುಕು ನೀರಿಗೆ ತುತ್ತು ಕೂಳಿಗೆ ಕೈಗಳಿಗಾಗಿ ತಡಕಾಡುತ್ತಾರೆ.
ಮತ್ತದೇ ಅಳಿದುಳಿದ ಜೀವಗಳ ಕೈಗಳೇ
ನೀರನ್ನಿತ್ತು ಕೂಳನ್ನಿತ್ತು ದೇಶಭಕ್ತರನ್ನೆಲ್ಲಾ
ನಮ್ಮವರೆಂದು ಕಾಪಿಡುತ್ತಾರೆ.
ಈಗ ಮತ್ತವರು ದೇವರಲ್ಲಿ ತಮ್ಮ ಮೊದಲ ಕೈ
ನೀಡೆಂದು ಮೊರೆಯಿಡುತ್ತಾರೆ.
ತಾವೇ ಫರ್ಮಾನು ಹೊರಡಿಸಿದ ದೇಶದ್ರೋಹಿಗಳ ಪಟ್ಟಿಯಲ್ಲಿ
ತಮ್ಮದೇ ಹೆಸರು ನೋಂದಾಯಿಸಲು ಸಾಲು ನಿಂತಿದ್ದಾರೆ!
- ಅರುಣ್ ಜೋಳದ ಕೂಡ್ಲಿಗಿ

ಕಾಮೆಂಟ್‌ಗಳಿಲ್ಲ: