ಭಾನುವಾರ, ಅಕ್ಟೋಬರ್ 25, 2009

ಸಮಾಜವಾದಿಗಳೆಲ್ಲ ಒಂದಡೆ ಸೇರಿದ್ದರು...

ಹಿರಿಯ ಸಮಾಜವಾದಿಗಳೆಲ್ಲ ಭಾನುವಾರ ಬೆಂಗಳೂರಿನಲ್ಲಿ ಒಂದೆಡೆ ಸೇರಿದ್ದರು. ಭಾರತದ ಸಮಾಜವಾದಿ ಚಳವಳಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಿಂದ ಅನೇಕ ಸಮಾಜವಾದಿ ಹೋರಾಟಗಾರರು ಭಾಗವಹಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದರೂ ಅನಂತಮುಊರ್ತಿ ಹಾಜರಿದ್ದರು.
ಅವರಲ್ಲಿ ಮಾತನಾಡಿದ ಅನೇಕರಿಗೆ ಇನ್ನೂ ಬತ್ತದ ಉತ್ಸಾಹ. ಸಮಾಜವಾದ ಹೋರಾಟ ವಿಫಲವಾಗಿಲ್ಲ, ಅದು ಎಂದಿಗೂ ಸಾಯುವುದಿಲ್ಲ ಎಂಬುದರ ಬಗ್ಗೆ ಅವರಿಗೆ ದೃಢ ನಂಬಿಕೆ. ವಿಶೇಷ ಅಂದರೆ, ಅವರಲ್ಲಿ ಅನೇಕರು ಸಮಾಜವಾದ ಅಂದ್ರೇನು, ಅದರ ಹೋರಾಟದ ಸ್ವರೂಪಗಳೇನು ಎಂದು ಪುಸ್ತಕ ಓದಿ ಹೋರಾಟಕ್ಕೆ ಇಳಿದವರಲ್ಲ. ಕಾರವಾರದ ವಿಷ್ಣು ನಾಯ್ಕ್ ತಮ್ಮ ಮಾತುಗಳಲ್ಲಿ ಹೇಳಿದರು. ಅವರು ಎಂಟನೇ ಇಯತ್ತೆ ಓದುವಾಗ ಲಾಲ್ ಝಂಡಾ ಹಿಡಿದು ಬೀದಿಗಿಳಿದವರು. ಅವರ ಬದುಕು ಅವರನ್ನು ಹೋರಾಟಕ್ಕೆ ದೂಡಿತ್ತು.
ಮಾತನಾಡಿದ ಅನೇಕರಲ್ಲಿ ಪ್ರಸ್ತುತ ವ್ಯವಸ್ಥೆ ಬಗ್ಗೆ ಬೇಸರವಿತ್ತು. ಹೋರಾಟ, ಸಾಮಾಜಿಕ ಕಳಕಳಿ, ಬದ್ಧತೆ ಎಲ್ಲವೂ ಮುಊಲೆಗುಂಪಾಗಿ ಕೇವಲ ಹಣ ಚುನಾವಣೆಯಲ್ಲಿ ಆಯ್ಕೆಗೊಳ್ಳಲು ಮಾನದಂಡವಾಗಿರುವುದು ವ್ಯವಸ್ಥೆಯ ಬಹುದೊಡ್ಡ ಲೋಪ. ಅದೊಂದು ಕಾಲವಿತ್ತು. ಶಾಂತವೇರಿ ಗೋಪಾಲಗೌಡ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ, ಎಸ್.ಕೆ ಕಾಂತ ಚುನಾವಣೆಗೆ ನಿಂತರೆ ಠೇವಣಿ ಹಣಕ್ಕಾಗಿ ಸ್ನೇಹಿತರ ಎದುರು ಕೈ ಚಾಚಬೇಕಿತ್ತು. ಲಿಂಗಪ್ಪ ಪ್ರಜಾವಾಣಿಗೆ (ಸಾಪ್ತಾಹಿಕ ಪುರವಣಿ, ಅಕ್ಟೋಬರ್ 25) ಬರೆದ ಲೇಖನದಲ್ಲಿ ಹೇಳ್ತಾರೆ, ಅವರು ಚುನಾವಣೆಗೆ ಸ್ಪರ್ಧಿಸಿದಾಗ ತಮ್ಮ ಸ್ನೇಹಿತರ ಜೊತೆ ಸೇರಿ ಚುನಾವಣೆ ವೆಚ್ಚಕ್ಕೆ ಜನರಿಂದ 8,500 ರೂ ಸಂಗ್ರಹಿಸಿದ್ದರಂತೆ. ಚುನಾವಣೆಯಲ್ಲಿ ಗೆದ್ದರು. ಆದರೂ 3,500 ರೂ ಇನ್ನೂ ಖರ್ಚಾಗದೆ ಉಳಿದಿದ್ದಂತೆ! ಅದನ್ನು ಮುಂದೆ ಪಕ್ಷದ ಇತರೆ ಚಟುವಟಿಕೆಗಳಿಗೆ ಬಳಸಿಕೊಂಡರಂತೆ.
ಒಂದು ಕ್ಷಣ ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ನಮ್ಮ ರಾಜಕೀಯ ಪಕ್ಷಗಳು ಖರ್ಚು ಮಾಡಿದ ಹಣ, ಹೆಂಡ.. ಎಲ್ಲವನ್ನೂ ನೆನಪು ಮಾಡಿಕೊಳ್ಳಿ! ಆ ದಿನಗಳಿಗೆ ನಾವು ಹೋಗಲು ಸಾಧ್ಯವೇ?
ಹಿರಿಯ ಹೋರಾಟಗಾರ ಮೈಕೇಲ್ ಫರ್ನಾಂಡಿಸ್ ಮಾತನಾಡಿ ಅಂಬಾನಿಯಂತಹ ಶ್ರೀಮಂತರೇ ಮತ್ತಷ್ಟು ಶ್ರೀಮಂತರಾಗಲು ನಾವೇಕೆ ಕಷ್ಟಪಟ್ಟು ದುಡಿಯಬೇಕು? ಸಮಾಜವಾದಿ ತತ್ವದ ನೆಲೆಯಲ್ಲಿ ಕಂಪನಿಗಳು ಹುಟ್ಟಿಕೊಳ್ಳಬೇಕಿದೆ. ಉದಾಹರಣೆಗೆ ಟೂತ್ ಬ್ರಶ್ - ಭಾರೀ ಬೇಡಿಕೆ ಇರುವ ಸಾಮಾಗ್ರಿ. ಕಡಿಮೆ ವೆಚ್ಚದಲ್ಲಿ ಒಂದು ಕಂಪನಿ ಸ್ಥಾಪನೆ ಮಾಡಿ, ಅದರ ಉತ್ಪನ್ನವನ್ನು ಒಂದು ಸಮಾಜವಾದಿ ಉತ್ಪನ್ನವಾಗಿ ಸ್ವೀಕರಿಸುವುದಾದರೆ ಬಂಡವಾಳಶಾಹಿಗಳಿಗೆ ಪಾಠ ಕಲಿಸಬಹುದು.
ಮೈಸೂರಿನ ಪ. ಮಲ್ಲೇಶ್ ಮಾತನಾಡುತ್ತ ಜನಸಂಘದ ಜತೆ ಕೈ ಜೋಡಿಸಿದ್ದು ಸಮಾಜವಾದ ಹೋರಾಟದ ಬಹುದೊಡ್ಡ ಅಪರಾಧ ಎಂದು ದೂರಿದರು. ಆ ಅಪರಾಧದ ಫಲ ಇಂದು ಕರ್ನಾಟಕದ ಜನ ಅನುಭವಿಸುತ್ತಿದ್ದಾರೆ ಎಂಬುದು ಅವರ ಮಾತಿನ ಧಾಟಿ.
ಆ ಸಭೆಯಲ್ಲಿ ಅನೇಕರು ಗಮನಿಸಿದ ಒಂದು ಅಂಶವೆಂದರೆ - ಯುವಕರು ಕಡಿಮೆ ಸಂಖ್ಯೆಯಲ್ಲಿದ್ದದ್ದು. ನಿಜ ಇಂದಿನ ಯುವಕರಿಗೆ ರಾಜಕೀಯ, ರಾಜಕೀಯ ಸಿದ್ಧಾಂತಗಳೆಡೆಗೆ ಅಷ್ಟಾಗಿ ಆಸಕ್ತಿ ಇಲ್ಲ.

ಕಾಮೆಂಟ್‌ಗಳಿಲ್ಲ: